ಮನು
ಚಿತ್ರ : ವಾಸಂತಿ ನಲಿದಾಗ
ನಿರ್ದೇಶನ : ರವೀಂದ್ರ ವೆಂಶಿ
ನಿರ್ಮಾಪಕ : ಜೇನುಗೂಡು ಕೆ.ಎನ್.ಶ್ರೀಧರ್
ಸಂಭಾಷಣೆ: ಶ್ರೀದೇವಿ ಮಂಜುನಾಥ್
ಸಂಗೀತ : ಶ್ರೀ ಗುರು
ಛಾಯಾಗ್ರಾಹಕ : ಪ್ರಮೋದ್ ಭಾರತೀಯ
ತಾರಾಗಣ : ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ, ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಕುರಿ ರಂಗ, ಮಂಜು ಪಾವಗಡ ಹಾಗೂ ಇತರರು...
ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಗಳು ಅವರ ಮುಂದಿನ ಜೀವನವನ್ನು ರೂಪಿಸುತ್ತವೆ. ಈ ಸಮಯದಲ್ಲಿ ಪೋಷಕರಾದವರು ಅವರ ಜೊತೆಗಿದ್ದು ತಪ್ಪುಹೆಜ್ಜೆ ಇಟ್ಟಾಗ ತಿಳಿಹೇಳಿ ಅವರನ್ನು ಸರಿದಾರಿಗೆ ಕರೆದುಕೊಂಡು ಬರಬೇಕು. ತಂದೆ ತಾಯಿಯ ಪ್ರೀತಿ ಅತಿಯಾದರೆ ಅದೇ ಮಕ್ಕಳು ದಾರಿ ತಪ್ಪಲು ಕಾರಣವಾಗಲೂಬಹುದು.
ಇದು ವಾಸಂತಿ ನಲಿದಾಗ ಚಿತ್ರದ ಸ್ಟೋರಿಲೈನ್. ಔಷಧಿ ತರಲೂ ಪರದಾಡುವ ಅರವಿಂದ್, ಮಗು ಹುಟ್ಟಿದ ಮೇಲೆ ಶ್ರೀಮಂತನಾಗುತ್ತಾನೆ. ಮಗ ಅವರ ಅದೃಷ್ಟದ ಬಾಗಿಲನ್ನ ತೆರೆಯುತ್ತಾನೆ. ತಂದೆ (ಸಾಯಿ ಕುಮಾರ್) ತಾಯಿ (ಸುಧಾರಣೆ) ಯ ಮುದ್ದಿನ ಮಗನಾಗಿ ಬೆಳೆಯುವ ಸಂಜು (ರೋಹಿತ್ ಶ್ರೀಧರ್) ಹೈಸ್ಕೂಲ್ ಮುಗಿಸಿ ಕಾಲೇಜ್ ಸೇರಿದಮೇಲೆ ಕಾಲೇಜ್ ಲೈಫ್ ಎಂಜಾಯ್ ಮಾಡುತ್ತಾನೆ. ಹಣ, ಪ್ರೀತಿಯ ಬೆಲೆ ಗೊತ್ತಿಲ್ಲದ ಹಾಗೆ ಬೆಳೆಯುವ ರೋಹಿತ್
ಇಡೀ ಕಾಲೇಜಿಗೆ ಟಾಪರ್ ಆದರೂ ಅಶಿಸ್ತಿನ ನಡವಳಿಕೆಯಿಂದ ತನ್ನ ತಂದೆ ಸಮಾಜದ ಮುಂದೆ ತಲೆತಗ್ಗಿಸುವಂತೆ ಮಾಡುತ್ತಾನೆ. ಅಲ್ಲದೆ ಕಾಲೇಜಿನಲ್ಲಿ ಸನ್ಮಾನ್ಯ (ಜೀವಿತಾ ವಸಿಷ್ಠ) ಎಂಬ ಯುವತಿಗೆ ಮನಸೋತು ಇಷ್ಟಪಡುತ್ತಾನೆ. ಇದನ್ನು ಸಹಿಸದ ಕಾಲೇಜಿನ ಪುಂಡ ವಿದ್ಯಾರ್ಥಿ ವಿಕ್ಕಿ. ಪ್ಲಾನ್ ಮಾಡಿ ಇವರಿಬ್ಬರನ್ನು ದೂರ ಮಾಡುತ್ತಾನೆ. ಸಂಜು ಕಾಲೇಜಿನಲ್ಲಿ ನಡೆಸಿದ ಗಲಾಟೆ ತಂದೆಯ ರಾಜಕೀಯ ಭವಿಷ್ಯಕ್ಕೂ ಅಡ್ಡಿಯಾಗುತ್ತದೆ. ಹಾದಿತಪ್ಪಿರುವ ಮಗನನ್ನು ಸರಿಪಡಿಸಬೇಕೆಂದು ನಿರ್ಧರಿಸಿದ ತಂದೆ ತಾನು ಓದಿದ ಊರಿನ ಹಳೆಯ ಕಾಲೇಜಿಗೆ ಸೇರಿಸುತ್ತಾನೆ. ಸಂಜು ಗೆ ಹಾಸ್ಟೆಲ್ ನಲ್ಲಿ ಸಿಗುವ ಗೆಳೆಯರ ಬಳಗ. ಅದೇ ಊರನಲ್ಲಿ ಮಕ್ಕಳಿಗೆ ಸಂಗೀತಾಭ್ಯಾಸ ಹಾಗೂ ನೃತ್ಯ ಕಲಿಸುವ ಸೇವಂತಿಯ (ಭಾವನ ಶ್ರೀನಿವಾಸ್) ಪರಿಚಯವಾಗುತ್ತದೆ. ಬಡತನದ ಬದುಕಿನಲ್ಲೇ ಸಂತೋಷವನ್ನು ಹುಡುಕುವ ಸೇವಂತಿಗೆ ಅಪಘಾತ ಮಾಡುವ ಸಂಜು, ನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಸೇವಂತಿಯ ಸ್ನೇಹ ವಿಶ್ವಾಸ ಗಳಿಸುತ್ತಾನೆ. ಆಕೆಯ ಸಹವಾಸದಿಂದ ಸಂಜುಗೆ ಕಷ್ಟ ಸುಖದ ಅರಿವಾಗುತ್ತದೆ. ಇಬ್ಬರಲ್ಲೂ ಪ್ರೀತಿ ಚಿಗುರುತ್ತದೆ. ಮುಂದೆ ನಡೆಯುವ ಕಥೆಯಲ್ಲಿ ಒಂದಷ್ಟು ಇಂಟರೆಸ್ಟಿಂಗ್ ಟ್ವಿಸ್ಟ್ ಗಳಿವೆ. ಅದನ್ನು ಚಿತ್ರಮಂದಿರದಲ್ಲೇ ನೋಡಬೇಕು.
ನಿರ್ದೇಶಕ ರವೀಂದ್ರ ವಂಶಿ ಅವರು ಒಂದೇ ಚಿತ್ರದಲ್ಲಿ ತಂದೆ ತಾಯಿಯ ಕರ್ತವ್ಯ, ಮಕ್ಕಳ ಜವಾಬ್ದಾರಿ, ಪ್ರೀತಿ ಪ್ರೇಮದ ಬಗ್ಗೆ ನಿರ್ಧಾರ ಈ ಎಲ್ಲಾ ಅಂಶಗಳನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದಾರೆ. ಚಿತ್ರದ ಪ್ರಥಮಾರ್ಧ ಕಾಲೇಜು ಕ್ಯಾಂಪಸ್ಸಿನಲ್ಲೇ ನಡೆಯುತ್ತದೆ. ಇನ್ನು ದ್ವಿತೀಯ ಭಾಗದಲ್ಲಿ ಪ್ರೀತಿ ಪ್ರೇಮ, ಜೀವನದ ಪಾಠವನ್ನು ಹೇಳುವ ಉತ್ತಮ ಪ್ರಯತ್ನ ಮಾಡಿ ಗೆದ್ದಿದ್ದಾರೆ. ತಂದೆ, ತಾಯಿಯ ಜೊತೆ ಮಕ್ಕಳೂ ನೋಡಲೇಬೇಕಾದಂಥ ಚಿತ್ರವಿದು. ಜೇನುಗೂಡು ಫಿಲಂಸ್ ಬ್ಯಾನರ್ ಮೂಲಕ ಸದಭಿರುಚಿಯ ಚಿತ್ರವೊಂದನ್ನು ಕೆ.ಎನ್. ಶ್ರೀಧರ್ ಅವರು ನಿರ್ಮಿಸಿದ್ದಾರೆ. ಇನ್ನು ಶ್ರೀ ಗುರು ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಇಂಪಾಗಿವೆ. ಹಾಗೆಯೇ ಪ್ರಮೋದ್ ಭಾರತೀಯ ಛಾಯಾಗ್ರಾಹಣದ ಕೆಲಸ ಉತ್ತಮವಾಗಿದೆ. ನಾಯಕನಾಗಿ ಅಭಿನಯಿಸಿರುವ ಯುವ ಪ್ರತಿಭೆ ರೋಹಿತ್ ಶ್ರೀಧರ್ ನಟನೆ, ಆಕ್ಷನ್ ಹಾಗೂ ಡ್ಯಾನ್ಸ್ ಎಲ್ಲವನ್ನೂ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿಯಾಗಿ ಅಭಿನಯಿಸಿರುವ ಜೀವಿತ ವಸಿಷ್ಠ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ನಟಿ ಭಾವನಾ ಶ್ರೀನಿವಾಸ್ ಪ್ರಬುದ್ದ ಯುವತಿಯ ಪಾತ್ರಕ್ಕೆ ಜೀವ ತುಂಬಿ ತೆರೆಯ ಮೇಲೆ ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ನಾಯಕನ ತಂದೆಯಾಗಿ ಸಾಯಿಕುಮಾರ್ ಪ್ರೀತಿಯ ವ್ಯಾಖ್ಯಾನ, ಬದುಕಿನ ಮೌಲ್ಯಗಳನ್ನು ಬಹಳ ಅರ್ಥಗರ್ಭಿತವಾಗಿ ಹೇಳಿದ್ದಾರೆ. ತಾಯಿಯ ಪಾತ್ರದಲ್ಲಿ ಸುಧಾರಣೆ ಕೂಡ ಗಮನ ಸೆಳೆಯುತ್ತಾರೆ. ಸಾಧು ಕೋಕಿಲ ಪ್ರೇಕ್ಷಕರನ್ನು ನಗಿಸುವಲ್ಲಿ ಗೆದಿದ್ದಾರೆ. ಕ್ಯೂಟ್ ಲವ್ ಸ್ಟೋರಿಯ ಜೊತೆಗೆ ಅತ್ಯುತ್ತಮ ಜೀವನದ ಸಂದೇಶವನ್ನು ಹೇಳುವ ಪ್ರಯತ್ನ ನಿಜಕ್ಕೂ ಉತ್ತಮವಾಗಿದೆ,